Friday 31 March 2017

ಕಫದ ಸಮಸ್ಯೆಯೇ?... ವಾಂತಿ ಮಾಡಿ!!


ಇದೇನು ಅಸಹ್ಯ...ಛೀ.. ಹೀಗೂ ಒಂದು ಚಿಕಿತ್ಸೆಯೇ?? ಕಫದ ಸಮಸ್ಯೆಗೆ ಕೆಮ್ಮಿ ಉಗುಳಿದರಾಯ್ತು! ಕಫವೆಲ್ಲಾ ಹೊರಗೆ ಬರುತ್ತದೆ.ಅದನ್ನು ಬಿಟ್ಟು ವಾಂತಿ ಮಾಡುವುದೇ! ಎಂದು ಮುಖ ಸಿಂಡರಿಸಿಕೊಳ್ಳುತ್ತಿದ್ದರೆ ಪೂರ್ತಿಯಾಗಿ ಬರವಣಿಗೆಯನ್ನು ಓದಿ ನೋಡಿ. ಹೌದು... ವಾಂತಿ ಮಾಡುವುದೂ ಒಂದು ಚಿಕಿತ್ಸಾ ಪದ್ಧತಿಯೇ. ಯೋಗ ಚಿಕಿತ್ಸೆಯಲ್ಲಿ ಅದನ್ನು "ವಮನ ಧೌತಿ" ಎಂದು ಕರೆಯುತ್ತಾರೆ. "ವಮನ" ಅಂದರೆ ವಾಂತಿ ಮಾಡುವುದು ,"ಧೌತಿ" ಅಂದರೆ ಚಿಲುಮೆ ಅಥವಾ ಚಿಮ್ಮುವುದು.ಹಾಗಾಗಿ "ವಮನ ಧೌತಿ" ಅಂದರೆ ನೀರು ಚಿಮ್ಮಿದಂತೆ/ ಕಾರಂಜಿಯಂತೆ ವಾಂತಿ ಮಾಡುವುದು. ಇಲ್ಲಿ ಎರಡು ವಿಧಗಳು:
1)ಕುಂಜಲ ಕ್ರಿಯಾ/ಗಜಕರಣೀ = ಆನೆ ನೀರು ಕುಡಿದು ಸೊಂಡಿಲಿನಿಂದ ಹೊರಚಿಮ್ಮಿಸಿದಂತೆ ಧೌತಿಯ ಅಭ್ಯಾಸ
2)ವ್ಯಾಘ್ರ ಕ್ರಿಯಾ = ಹುಲಿ ಆಹಾರ ತಿಂದು ೪ ಘಂಟೆಗಳ ನಂತರ ಹೊರಕಕ್ಕಿದಂತೆ ಊಟದ ನಂತರದ ಅಭ್ಯಾಸ
ವಾಂತಿ ಮಾಡುವುದು ಖಂಡಿತವಾಗಿಯೂ ಒಂದು ಅಸಹ್ಯ ಕ್ರಮವಲ್ಲ. ಜ್ವರದ ಸಂದರ್ಭದಲ್ಲಿ ನಾವು ವಾಂತಿಮಾಡಿದಾಗ ಶರೀರದಲ್ಲಿ ಜೀರ್ಣವಾಗದೇ ಉಳಿದ ಆಹಾರ ಹೊರಬಂದು ತದನಂತರ ಜೀರ್ಣಕ್ರಿಯೆ ಉತ್ತಮವಾಗುದು. ಇದು ಪ್ರಕೃತಿ ನಿಯಮ. ಕೆಲವೊಮ್ಮೆ ನಾಯಿ,ಬೆಕ್ಕುಗಳು ಹುಲ್ಲು ತಿಂದು, ತಿಂದ ಆಹಾರವನ್ನು ಕಕ್ಕುವುದನ್ನು ನೀವು ಗಮನಿಸಿರಬಹುದು.

ಅಭ್ಯಾಸ ಕ್ರಮ :
* ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿದ್ದಾಗ ಹೊಟ್ಟೆ ತುಂಬ, ಒಂದಿಷ್ಟು ಉಪ್ಪು ಹಾಕಿದ ಉಗುರು ಬೆಚ್ಚಗಿನ ನೀರು ಕುಡಿಯುವುದು.
* ನೀರು ಕುಡಿಯುವಾಗ ಅರ್ಧ ಕುಳಿತಿರಬೇಕು ( ಅಂದರೆ ಮಲವಿಸರ್ಜನೆಗೆ ಕುಳಿತಂತೆ, ಆದರೆ ಒಂದು ಕಾಲು ಮಡಚಿದ್ದು ಇನ್ನೊಂದು ಮಡಚಿದ ಕಾಲಿನ ಮೊಣಕಾಲು ನೆಲಕ್ಕೆ ಊರಿರುವುದು)
* ನೀರು ಕುಡಿಯುವಾಗ ಮಧ್ಯೆ ಮಧ್ಯೆ ವಿಶ್ರಾಂತಿ ಕೊಡದೇ ಒಂದೇ ವೇಗದಲ್ಲಿ, ಸರಾಗವಾಗಿ ಹೊಟ್ಟೆ ಪೂರ್ತಿ ನೀರು ಕುಡಿಯುವುದು.
* ಹೊಟ್ಟೆ ಪೂರ್ತಿಯಾದ ಮೇಲೆ, ಎರಡೂ ಕಾಲುಗಳನ್ನು ಅಗಲಿಸಿ ನಿಂತುಕೊಂಡು, ಸಾಕಷ್ಟು ಮುಂಭಾಗಕ್ಕೆ ಬಾಗಿ, ಕೈಯ ತೋರುಬೆರಳು, ಮಧ್ಯದ ಬೆರಳಿನಿಂದ ಕಿರುನಾಲಿಗೆಯನ್ನು ಮೀಟಿದಾಗ ನೀರು ಹೊರಚಿಮ್ಮುವುದು. ಹೊಟ್ಟೆ ಸಂಪೂರ್ಣವಾಗಿ ಖಾಲಿಯಾದ ಮೇಲೆಯೇ ಕೈ ಹೊರತೆಗೆಯುವುದು. ( ಬದಲಾವಣೆ: ಕೈ ಬೆರಳುಗಳಿಂದ ಕಷ್ಟವಾದಲ್ಲಿ ಹಲ್ಲುಜ್ಜುವ ಬ್ರಷ್ ಕೂಡ ಬಳಸಬಹುದು)

ಮುನ್ನೆಚ್ಚರಿಕಾ ಕ್ರಮಗಳು:
* ರಕ್ತದೊತ್ತಡದ ಸಮಸ್ಯೆ, ಹೃದಯ ಸಂಬಂಧೀ ಸಮಸ್ಯೆಯಿರುವವರು ಅಭ್ಯಾಸದ ಮೊದಲು ವೈದ್ಯರ ಸಲಹೆ ಪಡೆಯುವುದು ಅತೀ ಅವಶ್ಯ.
* ಕುಡಿದ ಉಪ್ಪು ನೀರು ಪೂರ್ತಿಯಾಗಿ ಖಾಲಿಯಾಗದಿದ್ದಲ್ಲಿ, ಸ್ವಲ್ಪ ಸಮಯದ ನಂತರ 2 ರಿಂದ 3 ಸಲ ಭೇದಿಯಾಗುವ ಸಾಧ್ಯತೆ ಇರುತ್ತದೆ. ಮುನ್ನೆಚ್ಚರಿಕೆ ಅವಶ್ಯ.
*ಧೌತಿ ಅಭ್ಯಾಸದ ನಂತದ ಉಪ್ಪು,ಹುಳಿ, ಖಾರ ರಹಿತ ಸಾತ್ವಿಕ ಆಹಾರ ಅತೀ ಅವಶ್ಯ.ಇಲ್ಲವಾದಲ್ಲಿ ಹೊಟ್ಟೆ ಹಾಳಾಗುವುದು!! ಸಾಕಷ್ಟು ತುಪ್ಪದೊಂದಿಗೆ ಕಿಚಡಿಯಂಥ ಸ್ನಿಗ್ಧಾಹಾರ ಸೂಕ್ತ.

ಪ್ರಯೋಜನಗಳು :
ಕಾಸ ಶ್ವಾಸ ಪ್ಲೀಹ ಕುಷ್ಠಂ ಕಫರೋಗಶ್ಚ ವಿಂಶತಿಃ!
ಧೌತಿಕರ್ಮ ಪ್ರಭಾವೇಣ ಪ್ರಯಾಂತ್ಯೇವ ನ ಸಂಶಯಃ!!(ಹಠಯೋಗ ಪ್ರದೀಪಿಕಾ, ದ್ವಿತೀಯೋಪದೇಶ, 25)
ಅಸ್ಥಮಾ, ಕೆಮ್ಮು, ಯಕೃತ್ತಿನ ರೋಗಗಳು, ಕುಷ್ಠರೋಗ ಹಾಗೂ ಇಪ್ಪತ್ತು ಬಗೆಯ ಕಫರೋಗಗಳು ಧೌತಿಕರ್ಮದ ಪರಿಣಾಮದಿಂದ ನಾಶವಾಗುತ್ತವೆಂಬುದರಲ್ಲಿ ಸಂಶಯವಿಲ್ಲ.
ವಾರಕ್ಕೆ ಮೂರು ಬಾರಿ ಅಭ್ಯಾಸ ಮಾಡುವುದು ಉತ್ತಮ. ಕಡಿಮೆಯಂದರೂ ವಾರಕ್ಕೊಮ್ಮೆ ಪ್ರಶಸ್ತ. ಇದರಿಂದ ಅಸ್ತಮಾ, ಅಲರ್ಜಿ, ಅಸಿಡಿಟಿ, ಹುಳಿತೇಗು ದೂರವಾಗಿ ಜೀರ್ಣಶಕ್ತಿ ಉತ್ತಮಗೊಳ್ಳುವುದು. ಪಚನ ಕ್ರಿಯೆಯೂ ಉತ್ತಮಗೊಂಡಂತೆ ಮಲಬದ್ಧತೆಯ ಸಮಸ್ಯೆ ದೂರವಾಗುವುದು. ಮೈಗ್ರೇನ್ ತಲೆನೋವು, ಬೆಳಗೆದ್ದಾಗ ಬಾಯಿಯಲ್ಲಿ ಕಹಿ ಅನುಭವವಾಗುವ ಪಿತ್ತದ ಸಮಸ್ಯೆಗಳಿಗೆ "ಧೌತಿ ಕರ್ಮ" ಅತ್ಯುತ್ತಮ ಪರಿಹಾರ.


ಡಾ. ಪುನೀತ್ ರಾಘವೇಂದ್ರ ಕುಂಟುಕಾಡು BNYS,MD Yoga Clinical 

1 comment:

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...