Sunday 26 August 2018

ಯೋಗಾಭ್ಯಾಸವೇ??!! ದೇಹವನ್ನಷ್ಟೇ ಅಲ್ಲ... ಮನಸ್ಸನ್ನೂ ಬಾಗಿಸಿ!!


“ಡಾಕ್ಟ್ರೇ... ನಾನು ನೀವು ಹೇಳ್ದಂತೆ ಪ್ರತಿನಿತ್ಯ ಅರ್ಧ ಘಂಟೆ ಯೋಗಾಸನ ಮಾಡ್ತೀನಿ. ಅದರಲ್ಲೂ ಆಸನಗಳಲ್ಲಿ ಸಾಕಷ್ಟು ಪ್ರಗತಿಯನ್ನೂ ಸಾಧಿಸಿದ್ದೇನೆ. ಮೊದಮೊದಲೆಲ್ಲಾ ಮುಂದೆ ಬಾಗೋದೇ ಕಷ್ಟ ಆಗಿರೋದು. ಆದ್ರೆ ಈವಾಗ ಪಾದಹಸ್ತಾಸನದಲ್ಲಿ ಹಣೆ ಸಲೀಸಾಗಿ ಮೊಣಕಾಲಿಗೆ ತಾಗುತ್ತೆ. ಹಾಗಿದ್ದೂ ಬಿ.ಪಿ., ಶುಗರ್ ಹಂಗೇ ಇದೆ. ಹೇಳೋವಂಥಾ ಬದ್ಲಾವಣೆ ಏನೂ ಇಲ್ಲ!! ಯೋಗಾಭ್ಯಾಸದಿಂದ ಎಲ್ಲಾ ರೋಗ ಗುಣವಾಗುತ್ತೆ ಅಂತಾರೆ.. ಆದರೆ ನನಗೇಕೋ ಸಂಶಯ ಶುರುವಾಗ್ತಿದೆ... ಯೋಗದಿಂದ ಏನೂ ಉಪಯೋಗವಿಲ್ಲ ಅನ್ಸುತ್ತೆ...ಸ್ಟ್ರೆಸ್ ಅನ್ನೋದೂ ಹಂಗೇ ಇದೆ...” ಈ‌ ರೀತಿಯಾಗಿ ಬರುತ್ತಿದ್ದ ಮಾತಿನ ಮಾಲೆ ಪಟಾಕಿಗೆ ನಗುತ್ತಾ ತಣ್ಣೀರೆರಚಿದೆ. ಬಿಟ್ರೆ ಇನ್ನೊಂದ್ ಸುತ್ತು ಪಟಾಕಿ ಸಿಡಿತ ಶುರುವಾಗೋದು ಖಚಿತ ಎಂದ್ಕೊಂಡು ನಾನೇ ಮಾತು ಶುರು ಮಾಡ್ದೆ. “ನೋಡಿ ಸರ್.... ಬರಿಯ ಯೋಗಾಸನದಿಂದ ಮನಸ್ಸಿನ ಹತೋಟಿ ಸಾಧ್ಯವಿಲ್ಲ. ಇನ್ನು ಹೇಗೆ ಪ್ರಯೋಜನಗಳನ್ನು ಬಯಸ್ತೀರಿ?? ಬರಿಯ ದೇಹವಷ್ಟೇ ಬಾಗಿದರೆ ಸಾಲದು. ಮನಸ್ಸೂ ಬಾಗಬೇಕು..... ಚಂಚಲ ಮನಸ್ಸನ್ನು ವಶದಲ್ಲಿಟ್ಟುಕೊಂಡು ಬಾಗಿಸಿದರೆ ಮಾತ್ರ ಯೋಗಾಭ್ಯಾಸದಿಂದ ಪ್ರಯೋಜನ. ಮನಸ್ಸನ್ನು ಚಂಚಲಗೊಳಿಸುವ ಆ ವಿಷಯಗಳನ್ನು ನಾವು ಅಂತರಾಯಗಳು ಅರ್ಥಾತ್ ಚಿತ್ತವಿಕ್ಷೇಪಗಳೆನ್ನುತ್ತೇವೆ.
ಚಿತ್ತವಿಕ್ಷೇಪಗಳು:
ವ್ಯಾಧಿ- ಸ್ತ್ಯಾನ- ಸಂಶಯ- ಪ್ರಮಾದಾಲಸ್ಯಾವಿರತಿ- ಭ್ರಾಂತಿದರ್ಶನಾಲಬ್ಧಭೂಮಿಕತ್ವಾನವಸ್ಥಿತತ್ವಾನಿ ಚಿತ್ತವಿಕ್ಷೇಪಾಸ್ತೇSಂತರಾಯಾಃ II
(ಪತಂಜಲಿ ಯೋಗ ಸೂತ್ರ, ಸಮಾಧಿ ಪಾದ,ಸೂತ್ರ 30)

ವ್ಯಾಧಿ, ಸ್ತ್ಯಾನ, ಸಂಶಯ, ಪ್ರಮಾದ, ಆಲಸ್ಯ, ಅವಿರತಿ, ಭ್ರಾಂತಿದರ್ಶನ, ಅಲಬ್ಧಭೂಮಿಕತ್ವ, ಅನವಸ್ಥಿತತ್ವ – ಈ ಚಿತ್ತವಿಕ್ಷೇಪಗಳು ಅಂತರಾಯಗಳು.
ವ್ಯಾಧಿ: ಶರೀರದ ತ್ರಿದೋಷಗಳಾದ ವಾತ-ಪಿತ್ತ-ಕಫ ಇವುಗಳಲ್ಲಾಗುವ ಏರುಪೇರುಗಳಿಂದ ಉಂಟಾಗುವ ಜ್ವರಾದಿ ಸಮಸ್ಯೆಗಳೇ ವ್ಯಾಧಿ. ತಿಂದ ಮತ್ತು ಕುಡಿದ ಆಹಾರವಸ್ತುಗಳಿಂದ ಉಂಟಾಗುವ ಪರಿಣಾಮಗಳು. ವ್ಯಾಧಿಯಿದ್ದಾಗ ಶರೀರ – ಮನಸ್ಸುಗಳು ಸರಿಯಾಗಿ ಕೆಲಸಮಾಡುವುದಿಲ್ಲವಾದ್ದರಿಂದ ಯೋಗಾಭ್ಯಾಸ ಹೇಗೆ ಸಾಧ್ಯ??
ಸ್ತ್ಯಾನ : ಚಿತ್ತಕ್ಕೆ ಬರುವ ಸೋಮಾರಿತನ. ಬೆಳ್ಳಂಬೆಳಗಿನ ಅಷ್ಟೊಳ್ಳೆ ಸಿಹಿನಿದ್ದೆಯನ್ನು ಬಿಟ್ಟು ಬೇಗನೆ ಎದ್ದು ಅಭ್ಯಾಸ ಮಾಡುವುದಾದರೂ ಹೇಗೆಂಬ ಮೈಗಳ್ಳತನ.
ಸಂಶಯ : ಪಕ್ಕದ ಮನೆಯವರಿಗೆ ಪ್ರಾಣಾಯಾಮದ ಅಭ್ಯಾಸದಿಂದ ಆರೋಗ್ಯ ಉತ್ತಮವಾಗಿದೆಯಂತೆ.ಬಿ.ಪಿ. ಕಡಿಮೆಯಾಗಿದೆಯಂತೆ!! ನನಗೆ ಅದರಲ್ಲಿ ನಂಬಿಕೆಯಿಲ್ಲ. ಆದರೂ ಅಭ್ಯಾಸ ಮಾಡಿ ನೋಡೋಣ ಎಂಬ ಸಂಶಯ ಭಾವ.
ಪ್ರಮಾದ : ತಿಳಿದೂ ಮಾಡುವ ತಪ್ಪುಗಳು. ಯೋಗಾಭ್ಯಾಸ ಆರೋಗ್ಯಕ್ಕೆ ಒಳ್ಳೆಯದೆಂದು ತಿಳಿದಿದ್ದೂ ಅಭ್ಯಾಸದಲ್ಲಿ ತೊಡಗಿಸಿಕೊಳ್ಳದಿರುವುದು.
ಆಲಸ್ಯ : ಜಡಭಾವ. ಇಂದೇಕೋ ಆಸನ ಮಾಡಲು ಮನಸ್ಸಿಲ್ಲ, ಶರೀರ ಭಾರ ಅನ್ನಿಸುತ್ತಿದೆ. ಹಾಗಾಗಿ ಇವತ್ತು ಅಭ್ಯಾಸ ಮಾಡುವುದು ಬೇಡ. ನಾಳೆ ಮಾಡೋಣ!!
ಅವಿರತಿ : ವಿಷಯಾಭಿಲಾಷೆ. ಅಲರಾಂ ಹೊಡೆದುಕೊಂಡರೂ ಹಾಸಿಗೆ ಬಿಟ್ಟೇಳುವ ಮನಸ್ಸಾಗದೆ ಅಲರಾಂ ನಿಲ್ಲಿಸಿ ನಿದ್ದೆ ಮುಂದುವರೆಸುವುದು. (ನಿದ್ರೆ ಎಂಬುದಿಲ್ಲಿ ವಿಷಯ)
ಭ್ರಾಂತಿದರ್ಶನ : ಉಪದೇಶಗಳನ್ನು ವಿಪರೀತವಾಗಿ ಅರಿಯುವುದು. ಯೋಗ ಪುಸ್ತಕಗಳನ್ನು ಓದಿ, ಟಿ.ವಿ.ಯಲ್ಲಿ ನೋಡುತ್ತಾ ಯೋಗಾಭ್ಯಾಸದಿಂದ ಎಲ್ಲಾ ಬಗೆಯ ದೈಹಿಕ ತೊಂದರೆಗಳು ನಿವಾರಣೆಯಾಗುವುದೆಂಬ ತಪ್ಪು ನಂಬಿಕೆ!!!
ಅಲಬ್ಧಭೂಮಿಕತ್ವ : ಅಂತಿಮ ಸ್ಥಿತಿಯನ್ನು ಪಡೆಯಲಾಗದಿರುವುದು. ಅಯ್ಯೋ.. ಸೊಂಟ ನೋವಾಗುತ್ತದೆ. ಇಷ್ಟೇ ಬಾಗಿದರೆ ಸಾಕು!! ಅಥವಾ ಕ್ರಮಬದ್ಧವಾಗಿ, ಪ್ರತಿನಿತ್ಯ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಸಮಯವಿದ್ದಾಗ ಮಾಡಿದರಾಯಿತು ಎನ್ನುವ ಮನಸ್ಸು!!
ಅನವಸ್ಥಿತತ್ವ : ದೀರ್ಘಕಾಲ ಅದೇ ಸ್ಥಿತಿಯಲ್ಲಿ ನಿಲ್ಲಲಾಗದ ಸ್ಥಿತಿ. ಮುಂದೆ ಬಾಗಿ ಹಣೆ ಮೊಣಕಾಲಿಗೆ ತಾಗಿಸಿದರೂ ಸಾಕಪ್ಪ ಕಾಲಿನಲ್ಲಿ ಸೆಳೆತ ಈ ಸ್ಥಿತಿಯನ್ನು ಬಿಡೋಣ ಎನ್ನುವ ಮನಸ್ಸು. ಹೇಗೂ ಪ್ರತಿನಿತ್ಯ ಅಭ್ಯಾಸ ಮಾಡುತ್ತೇನಲ್ಲ ಹಾಗಾಗಿ ಭಾನುವಾರ ಬೇಡ.. ಚೆನ್ನಾಗಿ ನಿದ್ದೆ ಮಾಡೋಣ ಎನ್ನುವ ಮನಸ್ಸು.
ದುಃಖ- ದೌರ್ಮನಸ್ಯಾಂಗಮೇಜಯತ್ವ-ಶ್ವಾಸಪ್ರಶ್ವಾಸಾ ವಿಕ್ಷೇಪಸಹಭುವಃ II
(ಪತಂಜಲಿ ಯೋಗ ಸೂತ್ರ, ಸಮಾಧಿ ಪಾದ,ಸೂತ್ರ 31)

ದುಃಖ, ದೌರ್ಮನಸ್ಯ, ಅಂಗಮೇಜಯತ್ವ, ಶ್ವಾಸ, ಪ್ರಶ್ವಾಸ ಇವು ವಿಕ್ಷೇಪದೊಂದಿಗೆ ಇರುವಂತವುಗಳು
ದುಃಖ: ಇಲ್ಲಿ ಮೂರು ವಿಧ
ಆಧ್ಯಾತ್ಮಿಕ – ಆಸೆ, ಅಭಿಲಾಷೆಗಳು ಪೂರ್ಣಗೊಳ್ಳದಿರುವಾಗ ಉಂಟಾಗುವ ದುಃಖ
ಆದಿಭೌತಿಕ – ದೈಹಿಕವಾಗಿ ಶರೀರಗಳಿಗಾಗುವ ಗಾಯ, ನೋವು, ಅಪಘಾತಗಳು
ಆಧಿದೈವಿಕ – ಪ್ರವಾಹ, ಭೂಕಂಪಾದಿಗಳಿಂದ ಉಂಟಾಗುವ ನೋವು
ಈ ಎಲ್ಲಾ ಬಗೆಯ ದುಃಖಗಳಿದ್ದಾಗ ಮನಸ್ಸನ್ನು ಯೋಗದಲ್ಲಿ ಕೇಂದ್ರೀಕರಿಸುವುದು ಹೇಗೆ?
ದೌರ್ಮನಸ್ಯ : ಆಸೆ- ಇಚ್ಛೆಗಳು ನೆರವೇರದೆ ಹೋದರೆ ಮನಸ್ಸಿನಲ್ಲುಂಟಾಗುವ ಕ್ಷೋಭೆಯೇ ದೌರ್ಮನಸ್ಯ. ಕ್ಷೋಭೆಯಿಂದ ಮನಸ್ಸು ಹಾಳಾದರೆ ಯೋಗ ಮಾರ್ಗ ಅಸಾಧ್ಯ.
ಅಂಗಮೇಜಯತ್ವ : ಶರೀರದ ಅಂಗಾಂಗಗಳ ಮೇಲೆ‌ಹಿಡಿತವಿಲ್ಲದಿರುವುದು. ಗಮನಿಸಿ.. ಕುಳಿತಾಗ ಕಾಲು ಅಲ್ಲಾಡಿಸುತ್ತಾ ಇರುವವರು ಹೆಚ್ಚು ಚಂಚಲ ಸ್ವಭಾವದವರಾಗಿರುತ್ತಾರೆ.
ಶ್ವಾಸ, ಪ್ರಶ್ವಾಸ : ಇಚ್ಛೆಯಿಲ್ಲದೇ ಶ್ವಾಸ ಒಳಗೆ , ಹೊರಗೆ ಚಲಿಸುವುದು. ಹಠಯೋಗ ಪ್ರದೀಪಿಕದಲ್ಲಿ ಹೇಳಿರುವಂತೆ
“ಚಲೇ ವಾತೇ ಚಲೇ ಚಿತ್ತಂ ನಿಶ್ಚಲೇ ನಿಶ್ಚಲಂ ಭವೇತ್”
ವಾಯುವು ಚಲಿಸುತ್ತಿದ್ದರೆ ಮನಸ್ಸೂ ಚಲಿಸುತ್ತಿರುತ್ತದೆ. ಚಲಿಸದೆ ನಿಶ್ಚಲವಾಗಿದ್ದರೆ ಮನಸ್ಸೂ ನಿಶ್ಚಲವಾಗಿರುತ್ತದೆ. ವಾಯುವನ್ನು, ಮನಸ್ಸನ್ನು ಹಿಡಿತದಲ್ಲಿಡಲು ಇರುವ ಅಭ್ಯಾಸವೇ ಪ್ರಾಣಾಯಾಮ!!
ಈ ಎಲ್ಲಾ ವಿಷಯಗಳು ಮನಸ್ಸನ್ನು ಚಂಚಲಗೊಳಿಸುತ್ತವೆ. ಈ ಚಿತ್ತವಿಕ್ಷೇಪಗಳನ್ನು ನಮ್ಮ ವಶದಲ್ಲಿಟ್ಟು ಯೋಗಾಭ್ಯಾಸ ಮಾಡಿದಲ್ಲಿ ಮಾತ್ರ ಪೂರ್ಣ ಪ್ರಯೋಜನ ಲಭಿಸುವುದು. ಚಿತ್ತವಿಕ್ಷೇಪಗಳನ್ನು ನಮ್ಮ ಹಿಡಿತದಲ್ಲಿಡುವುದೂ ಸುಲಭ ಸಾಧ್ಯ. ಇವುಗಳನ್ನೇ ಚಿತ್ತಪ್ರಸಾದನವೆಂದೂ ಕರೆಯುವರು. ಹೆಸರೇ ಸೂಚಿಸುವಂತೆ ಚಿತ್ತವನ್ನು ಸಂತುಷ್ಠಿಗೊಳಿಸುವವು.
ಚಿತ್ತಪ್ರಸಾದನ :
ಮೈತ್ರೀಕರುಣಾಮುದಿತೋಪೇಕ್ಷಾಣಾಂ ಸುಖದುಃಖಪುಣ್ಯಾಪುಣ್ಯಾವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್ II
(ಪತಂಜಲಿ ಯೋಗ ಸೂತ್ರ, ಸಮಾಧಿ ಪಾದ,ಸೂತ್ರ 33)

ಸುಖಿಗಳಲ್ಲಿ ಮೈತ್ರಿಯನ್ನೂ ದುಃಖಿಗಳಲ್ಲಿ ಕರುಣೆಯನ್ನೂ ಪುಣ್ಯವಂತರಲ್ಲಿ ಹರ್ಷವನ್ನೂ ಪಾಪಿಗಳಲ್ಲಿ ಉಪೇಕ್ಷೆಯನ್ನೂ ಭಾವಿಸುವುದರ ಮೂಲಕ ಚಿತ್ತಶಾಂತಿಯನ್ನು ಹೊಂದಬಹುದು.
ಸುಖಿಗಳೊಂದಿಗೆ ಸ್ನೇಹಭಾವ – ಗೆಳಯರೊಂದಿಗೆ ಬೆಳೆಸುವ ಸ್ನೇಹ, ಖುಷಿಯನ್ನು ಹಂಚಿಕೊಳ್ಳುವುದು , ಜೊತೆಗೂಡಿ ಮಾಡುವ ಜಾಗಿಂಗ್, ವ್ಯಾಯಾಮ ಇತ್ಯಾದಿ
ದುಃಖಿಗಳಲ್ಲಿ ಕರುಣೆಭಾವ - ಕಷ್ಟದಲ್ಲಿದ್ದವರಿಗೆ ಮಾಡುವ ಸಹಾಯ, ಅಪಘಾತವಾದವನನ್ನು ಆಸ್ಪತ್ರೆಗೆ ಸೇರಿಸುವುದು
ಪುಣ್ಯವಂತರಲ್ಲಿ ಹರ್ಷಭಾವ – ಗೆಳೆಯನಿಗೆ ಪ್ರಶಸ್ತಿ ಬಂದಾಗ ಅಸೂಯೆ ಪಡದೆ ತಾನೂ ಹರ್ಷಿಸುವುದು, ಮನೆಗೆಲಸದವನ ಮಗಳು ಓದಿನಲ್ಲಿ ಪ್ರಥಮ ಸ್ಥಾನ ಬಂದರೆ ತನ್ನ ಮಗಳು ಬಂದಿಲ್ಲ ಎಂದು ಅಸೂಯೆ ಪಡದೆ ಆ ಮಗುವಿನ ಮುಂದಿನ ಓದಿಗೆ ನೆರವಾಗುವುದು. (ಕೆಟ್ಟ ಆಲೋಚನೆಗಳು ಹೇಗೆ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂಬುದನ್ನು ತಿಳಿಯಲು "ಕಾಯಿಲೆಗಳು ನಮಗೇ ಏಕೆ ಬರುತ್ತವೆ?" ಲೇಖನವನ್ನು ಓದಿ)
ಪಾಪಿಗಳಲ್ಲಿ ಉಪೇಕ್ಷೆಭಾವ – ಕ್ಯೂನಲ್ಲಿ ಹಿಂದೆ ತಳ್ಳಿದ ಎಂದು ಜಗಳಕ್ಕೆ ಮುಂದಾಗದೆ ಸಮಾಧಾನದಿಂದ ಮುಂದುವರೆಯುವುದು, ಆಫೀಸ್ ನಲ್ಲಿ ಬಾಸ್ ಬೈದರೆಂದು ಒತ್ತಡಕ್ಕೆ ಒಳಗಾಗದೆ ಅದನ್ನು ಅಲಕ್ಷಿಸಿ ಕೆಲಸ ಮುಂದುವರೆಸುದು..
ಮನಸ್ಸನ್ನು ಬಾಗಿಸುವುದೆಂದರೆ ಇದೇ ಇಲ್ಲವೆ?? ಈ ಎಲ್ಲಾ ಭಾವಗಳನ್ನು ಮೈಗೂಡಿಸಿಕೊಳ್ಳದೆ ಬರಿಯ ಆಸನ, ಪ್ರಾಣಾಯಾಮ, ಧ್ಯಾನ ಮಾಡಿದರೆ ಏನು ಪ್ರಯೋಜನ. ಮಾನಸಿಕ ಒತ್ತಡ ಅಥವಾ "ಸ್ಟ್ರೆಸ್" ನ ನಿರ್ವಹಣೆ ಸಾಧ್ಯವೇ ಇಲ್ಲ. ಕೊನೆಗೆ ಯೋಗಾಭ್ಯಾಸದಿಂದ ಪ್ರಯೋಜನವಿಲ್ಲ ಎಂಬ ಮಾತೇ ಬಲವಾಗುತ್ತದೆ!!
ಡಾ. ಪುನೀತ್ ರಾಘವೇಂದ್ರ ಕುಂಟುಕಾಡು BNYS, MD Yoga Clinical

1 comment:

  1. ಪುನೀತ್ ಅಣ್ಣ,
    ಯೋಗಿಯಾಗಿರದೆ ನೀವು ಈ ಅನುಭವದ ಲೇಖನವನ್ನು ಬರೆಯಲು ಸಾಧ್ಯವಿಲ್ಲ.
    ತುಂಬಾ ಚೆನ್ನಾಗಿದೆ.
    ಕೋಟಿ ಕೋಟಿ vandanegalu

    ReplyDelete

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...